ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮವಾದ ಶುಶ್ರುತ್ ಎಂಟರ್ಪ್ರೈಸಸ್ ನಿರ್ಮಾಣದ ‘ಒಗ್ಗರಣೆ ಡಬ್ಬಿ‘ಗೆ ದಾಖಲೆಗಳು ಜಮೆಯಾಗುತ್ತಿವೆ. ಈಗಾಗಲೇ ಗೃಹಿಣಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಕಾರ್ಯಕ್ರಮದಲ್ಲಿ ತಯಾರಿಸಲಾದ ಖಾದ್ಯಗಳ ಪುಸ್ತಕವೂ ಸೂಪರ್ ಹಿಟ್ ಆಗಿದೆ. ಈ ಯಶಸ್ವೀ ಪುಸ್ತಕದ ಮೂರನೇ ಸಂಚಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ.
ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆದ ‘ಒಗ್ಗರಣೆ ಡಬ್ಬಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಕಾರ್ಯಕ್ರಮದ ಚಿತ್ರೀಕರಣದ ಸಂದರ್ಭದಲ್ಲಿ ಉಪೇಂದ್ರ ಈ ಪುಸ್ತಕವನ್ನೂ ಬಿಡುಗಡೆಗೊಳಿಸಿದರು. ಅಂದಹಾಗೆ ಒಗ್ಗರಣೆ ಡಬ್ಬಿ ಪುಸ್ತಕದ ಮೊದಲ ಹಾಗೂ ಎರಡನೇ ಸಂಚಿಕೆಗಳು ಈಗಾಗಲೇ ೫ಂ ಸಾವಿರಕ್ಕೂ ಅಧಿಕ ಸಂಖೈಯಲ್ಲಿ ಮಾರಾಟಗೊಂಡಿವೆ. ಇದೀಗ ಉಪ್ಪಿ ಕೈಯಲ್ಲಿ ಬಿಡುಗಡೆಗೊಂಡಿರುವ ಮೂರನೇ ಸಂಚಿಕೆ ಈ ದಾಖಲೆಯನ್ನೇ ಮುಂದುವರೆಸುತ್ತದೆ ಎಂಬುದು ಕಾರ್ಯಕ್ರಮ ನಿರೂಪಕ ಮುರಳಿಯವರ ಆಶಯ.
ಈ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಉಪೇಂದ್ರ ಅವರೇ ಸ್ವತಃ ಉಪ್ಪಿಟ್ಟು ತಯಾರಿಸಿದ್ದು ವಿಶೇಷ. ಆ ಬಳಿಕ ಮಾತನಾಡಿದ ಉಪೇಂದ್ರ ‘ಅಡುಗೆ ಅನ್ನೋದು ಬ್ರಹ್ಮ ವಿದ್ಯೆ. ಅದೂ ಒಂದು ಕಲೆ. ಊಟವನ್ನು ನಾನು ಎಂಜಾಯ್ ಮಾಡ್ತೀನಿ. ಕೆಲವೊಮ್ಮೆ ನಾನೇ ತಯಾರಿಸಿ ತಿನ್ನುವ ಮೂಲಕವೂ ಎಂಜಾಯ್ ಮಾಡ್ತೀನಿ. ಅಡುಗೆಯಿಂದ ಮಜಾ ಮತ್ತು ಮನೋರಂಜನೆಗಳೂ ಸಿಗುತ್ತವೆ. ಮಾಮೂಲಿಯಾಗಿ ಅಡುಗೆ ಹೇಗೇ ಇದ್ದರೂ ಉಪ್ಪಿನಕಾಯಿ, ಸಾಂಬಾರುಗಳನ್ನು ಸೇರಿಸಿ ನಾನೇ ಒಂದು ರುಚಿ ಕ್ರಿಯೇಟ್ ಮಾಡಿಕೊಳ್ತೀನಿ. ಇದೂ ಒಂಥರಾ ಅಡುಗೇನೇ. ಅಕಾಸ್ಮಾತಾಗಿ ಅಡುಗೆ ಚೆನ್ನಾಗಿಲ್ಲ ಅಂದ್ರೂ ಮಾಡಿದವರನ್ನು ದೂರೋದಿಲ್ಲ. ಈ ಕಾರ್ಯಕ್ರಮವನ್ನು ನಾನೂ ನೋಡುತ್ತೇನೆ ಎಂದರು. ಈ ವಿಶೇಷ ಕಾರ್ಯಕ್ರಮ ವರಮಹಾಲಕ್ಷ್ಮಿ ಹಬ್ಬದ ಶುಕ್ರವಾರದಂದು ಮಧ್ಯಾಹ್ನ ೧ ರಿಂದ ೨ ಘಂಟೆಯ ವರೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಮುರಳಿಯವರ ಚೇತೋಹಾರಿ ನಿರೂಪಣೆಯ ಮೂಲಕ ಈ ಕಾರ್ಯಕ್ರಮ ದೇಶ ವಿದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿದೆ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ಈ ಕಾರ್ಯಕ್ರಮ ವೀಕ್ಷಿಸುವವರಿದ್ದಾರೆ. ಬೇರೆ ಬೇರೆ ದೇಶಗಳಲ್ಲಿಯೂ ಮುರಳಿಯವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳಿಕೊಳ್ಳುವವರ ಸಂಖೈಯೂ ಹೆಚ್ಚಿದೆಯಂತೆ.
ಅಂದಹಾಗೆ ಪ್ರೇಕ್ಷಕರ ಬೇಡಿಕೆಯ ಮೇರೆಗೆ ಇದೇ ಸೆಪ್ಟೆಂಬರ್ ೧೬ನೇ ತಾರೀಕಿನಿಂದ ‘ಊರೂರಲ್ಲಿ ಒಗ್ಗರಣೆ ಡಬಿ ಎಂಬ ಹೊಸಾ ರೀತಿಯಲ್ಲಿಯೂ ಈ ಕಾರ್ಯಕ್ರಮ ಮೂಡಿ ಬರಲಿದೆ. ಈಗಾಗಲೇ ಟಿಆರ್ಪಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿರುವ ಈ ಕಾರ್ಯಕ್ರಮ ಶುರುವಾದದ್ದು ೨ ವರ್ಷಗಳ ಹಿಂದೆ. ಈವರೆಗೆ ೨ ಸಾವಿರಕ್ಕಿಂತಲೂ ಹೆಚ್ಚು ಹೊಸ ರುಚಿಗಳನ್ನು ವೀಕ್ಷಕರಿಗೆ ಪರಿಚಯಿಸಿದೆ. ಸ್ಟಾರ್ ಹೋಟೆಲ್ನಿಂದ ಹಿಡಿದು ಸಾಮಾನ್ಯ ಅಡುಗೆ ಕೆಲಸದವರನ್ನು ಕರೆತಂದು ಹೊಸರುಚಿ ಪರಿಚಯಿಸಿರುವುದು ಈ ಕಾರ್ಯಕ್ರಮದ ವಿಶೇಷ.
ಇನ್ನು ಕೆಲವೇ ದಿನಗಳಲ್ಲಿ ‘ನಾನ್ವೆಜ್ ಧಮಾಕಾ ಭಾಗ-೪ ಎಂಬ ಹೊಸಾ ಪುಸ್ತಕ ಬಿಡುಗಡೆಗೊಳಿಸುವುದಾಗಿಯೂ ನಿರೂಪಕ ಮುರಳಿ ಹೇಳಿದರು.